ಭಾರತ ಕ್ರಿಕೆಟ್ ತಂಡದ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಬಿಸಿಸಿಐ ಪ್ರಕಟಿಸಿದ ತಂಡ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ. ಆಯ್ಕೆ ಸಮಿತಿಯ ಕೆಲವು ನಿರ್ಧಾರಗಳು ಅಭಿಮಾನಿಗಳ ಜೊತೆಗೆ ಮಾಜಿ ಆಟಗಾರರಲ್ಲೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಈ ಸರಣಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿರುವ ಆಯ್ಕೆದಾರರು, ಕೆಲವು ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಕೆಲ ಅನುಭವಿಗಳಿಗೂ ಮತ್ತೆ ಚಾನ್ಸ್ ನೀಡಿದ್ದಾರೆ. ಆದರೆ ಗಾಯದ ಕಾರಣದಿಂದ ಕಳೆದ ಐದು ತಿಂಗಳು ಯಾವುದೇ ಸ್ಪರ್ಧಾತ್ಮಕ ಪಂದ್ಯ ಆಡದ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಭಾರತದ ಮಾಜಿ ಕ್ರಿಕೆಟಿಗ ಸದಗೋಪನ್ ರಮೇಶ್ ಈ ಆಯ್ಕೆಯನ್ನು ಪ್ರಶ್ನಿಸಿದ್ದು, "ಗಾಯದಿಂದ ಚೇತರಿಸಿಕೊಂಡ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ ಬಳಿಕವೇ ರಾಷ್ಟ್ರೀಯ ತಂಡಕ್ಕೆ ಅವಕಾಶ ನೀಡಬೇಕು ಎಂಬ ನಿಯಮವನ್ನು ತಂಡದ ನಿರ್ವಹಣೆ ಹಲವು ಬಾರಿ ಹೇಳಿದೆ. ಹಾಗಿದ್ದರೆ ಹರ್ಷಿತ್ ರಾಣಾ ವಿಚಾರದಲ್ಲಿ ಬೇರೆ ಮಾನದಂಡ ಏಕೆ?" ಎಂದು ಪ್ರಶ್ನಿಸಿದ್ದಾರೆ.
ಮೊಹಮ್ಮದ್ ಶಮಿ ಸೇರಿದಂತೆ ಹಲವಾರು ಆಟಗಾರರಿಗೆ ಫಿಟ್ನೆಸ್ ಪರೀಕ್ಷೆ ಹಾಗೂ ದೇಶೀಯ ಪಂದ್ಯಗಳ ಮೂಲಕ ತಮ್ಮ ಸಾಮರ್ಥ್ಯ ತೋರಿಸಲು ಹೇಳಲಾಗಿತ್ತು. ಆದರೆ ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ಯಾವುದೇ ಸ್ಪರ್ಧಾತ್ಮಕ ಪಂದ್ಯ ಆಡದ ರಾಣಾಗೆ ನೇರವಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಸ್ಪಷ್ಟ ಕಾರಣ ತಿಳಿಸಲಾಗಿಲ್ಲ ಎಂದು ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಎಲ್ಲ ಆಟಗಾರರಿಗೂ ಒಂದೇ ರೀತಿಯ ಮಾನದಂಡ ಅನ್ವಯಿಸಬೇಕು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕೆಂದು ಒತ್ತಾಯಿಸಿದ್ದಾರೆ.
ಈ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಹರ್ಷಿತ್ ರಾಣಾ ಆಯ್ಕೆ ಕುರಿತು ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ನಿರ್ಧಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಗಮನ ಸೆಳೆಯುವ ಸಾಧ್ಯತೆ ಇದೆ.